ದ್ವಿತೀಯ ಮುದ್ರಣ ಕಂಡ ಕಾಲಡಿಯ ಕಣ್ಣು
ಕೋಲಾರ: ಬಿಡುಗಡೆಗೊಂಡ ಹದಿನೈದು ದಿನಗಳೊಳಗೆ ದಲಿತ ಚಳವಳಿಯ ಮಂಚೂಣಿ ನಾಯಕ ಸಿ.ಎಂ.ಮುನಿಯಪ್ಪರ ಆತ್ಮಕಥನ ಕಾಲಡಿಯ ಕಣ್ಣು ದ್ವಿತೀಯ ಮುದ್ರಣವನ್ನು ಕಂಡು ಓದುಗರ ಮನ್ನಣೆಗೆ ಪಾತ್ರವಾಗಿದೆ. ಸಿ.ಎಂ.ಮುನಿಯಪ್ಪರ ನಾಲ್ಕು ದಶಕಗಳ ಚಳವಳಿಯ ಬದುಕು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಚಾರಿತ್ರಿಕ ಹೋರಾಟದ ಹಾದಿಯನ್ನು ದಾಖಲಿಸುತ್ತಲೇ, ಕಗ್ಗತ್ತಲಲ್ಲಿದ್ದ ದಮನಿತ ಲೋಕದ ಒಡಲಾಳದ ಧ್ವನಿಯಾಗಿ ಕಾಲಡಿಯ ಕಣ್ಣು ಕೃತಿಯು ದಲಿತ ಲೋಕದ ಕಥನವಾಗಿ ಮೂಡಿ ಬಂದಿತ್ತು. 2026 ಜುಲೈ 10 ರಂದು ಮುಂಗೋಳಿ ಪ್ರಕಾಶನದ ಮೂಲಕ ಈ ಕೃತಿಯು ಸಾವಿರ ಪ್ರತಿಗಳ ಮೊದಲ ಮುದ್ರಣ ಬಿಡುಗಡೆಗೊಂಡ ಹದಿನೈದು ದಿನಕ್ಕೆ ಕೃತಿಯ ಎಲ್ಲಾ ಪ್ರತಿಗಳು ಮಾರಾಟವಾಗಿ, ನಾಡಿನ ಓದುಗರಿಂದ ವ್ಯಾಪಕವಾಗಿ ಬೇಡಿಕೆ ಬಂದಿದ್ದರಿಂದ ಮತ್ತೇ ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ. ಸಾವಿರಾರು ವರ್ಷಗಳಿಂದ ಅಕ್ಷರ ಸಂಸ್ಕೃತಿಯಿಂದಲೇ ವಂಚಿತವಾಗಿದ್ದ ಸಮುದಾಯದ ಕಥನವನ್ನು ಇಡೀ ಕನ್ನಡ ನಾಡು ಪ್ರೀತಿಯಿಂದ ಸ್ಪೀಕರಿಸಿದೆ, ಇದು ಸ್ವಾಭಿಮಾನ, ಸಮಾನತೆಯ ಹೋರಾಟದ ಹಾದಿಗೆ ಪ್ರಜ್ಞಾವಂತ ಓದುಗರು ನೀಡಿದ ಅಭೂತ ಪೂರ್ವ ಮನ್ನಣೆ ಎನ್ನಲಾಗಿದೆ. ಮೊದಲ ಮುದ್ರಣ ಹೊರ ಬಂದ ತಕ್ಷಣವೇ ನಾಡಿನ ಮೂಲೆ ಮೂಲೆಗಳಿಂದ ದಲಿತ ಚಳವಳಿಯ ಹಿರಿಯರು, ಸಾಹಿತಿಗಳು, ಯುವಕರು ಮತ್ತು ವಿದ್ಯಾರ್ಥಿಗಳು ಕೃತಿಕಾರರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ದಲಿತ ಚಳವಳಿಯ ಇತಿಹಾಸ ಮತ್ತು ನೈಜ ಘಟನೆಗಳ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ ಎಂಬ ಓದುಗರ ಪ್ರೀತಿಯ ನುಡಿಗಳು ತಮ್ಮ ಬರವಣಿಯ ಸಾರ್ಥಕತೆಯನ್ನು ಹೆಚ್ಚಿಸಿವೆ, ಎರಡನೇ ಮುದ್ರಣಕ್ಕೆ ಪ್ರೇರಣೆ ನೀಡಿದ ಪ್ರೀತಿಯ ಓದುಗ ಬಂಧುಗಳಿಗೆ ಕೃತಿಕಾರ ಸಿ.ಎಂ.ಮುನಿಯಪ್ಪ ಋಣಿಯಾಗಿರುವುದಾಗಿ ತಿಳಿಸಿದ್ದಾರೆ.